ಸ್ವರಚಿತ ಕವನಗಳು

ಸ್ವರಚಿತ ಕವನಗಳು

Thursday, October 23, 2014

ನೀనిಲ್ಲದ ದಿನಗಳಲಿ

ಮೌನವಾಗಿವೆ ಭಾವಗಳು
ಮ್ಲಾನವಾಗಿವೆ ಕನಸಿನ ಬಣ್ಣಗಳು
ಹೃದಯದ  ಸರಸಿಯಲ್ಲೇ ಅರಳಿದ
ತಾವರೆಯ ಹೂಗಳು.

ನೀನಿಲ್ಲದ ದಿನಗಳಲಿ ಇರುಳು
ತಪ್ತವಾಗಿದೆ; ಪ್ರೀತಿಯ ಇನಿದನಿಗಳು
ಸೊಂಪಾಗಿ ಹನಿಯಾಗಿ ತೊಟ್ಟಿಕ್ಕಲಾಗದೇ
ಬತ್ತಿಹೋಗಿವೆ ಪಿಸು ಮಾತಿನ ಕುಸುಮಗಳು.

ಹ್ಞಾಂ! ಹಾಗೂ ಪಿಸುಗುಟ್ಟಿ ನುಡಿಯಲಾಗದೆ
ಹ್ಞುಂ, ಹೀಗೂ ಬಿಗುವಿಟ್ಟು ಸವಿ ಹೀರಲಾಗದೆ
ಒಣಗಿವೆ ಚೆಂದುಟಿಗಳು; ಹೊರಗಿನ ನೋವಿನಲ್ಲೂ
ಸುಖಿಸಿ ಇಹ ಮರೆಯಲೆಳೆಸುವ ಒಳಗಿನ ಅಂಗಗಳು
ತಟ್ಟನೆ ಕಾವೇರಿದರೂ ತಂಪಾಗದಿವೆ.

ಗೆಳೆಯಾ, ಅಂದಿಗೆ ಬೆದೆ ಬಂದ ಸೊಕ್ಕಿನಲಿ
ಹೆಡೆಯಾಡಿಸುತ್ತ ತಪ್ತವಾಗಿ ಹೋದ
ಕಾಮನೆಗಳೆಲ್ಲ ಇಂದಿನ ಅರಿವಿಗೆ ತಣ್ಣಗಾಗಿ
ಕರಗಿವೆ; ಬಿಸಿಯುಸಿರು ನಿಟ್ಟುಸಿರಾಗಿದೆ
ರಾಗ-ರತಿಯ ನವಿರಾದ ನರಳಿಕೆಗಳೆಲ್ಲವೂ
ಸತ್ತು ಪ್ರೇತವಾಗಿ ಸಂಚರಿಸುತ್ತವೆ.    

****

Wednesday, July 30, 2014

ಅಭಿಶಾಪ

ಭವಿಯ ರಮ್ಯತೆಗೆ ಭಾವಾರ್ಥಗಳ ತುಂಬಿ                               
 ಹಾಡಿಹೊಗಳಿದರು ಕವಿಗಳು;
ನೀರಸ ಜೀವನದಿ ಒಣನಗೆ ಅವಮಾನಗಳಲಿ
ಹಳಿದು ಕಣ್ಣೀರಿಳಿದರೂ  ಸುಮ್ಮನೆ ನಿರ್ಲಿಪ್ತರಾಗಿ
ಬದುಕಬೇಕೆಂದು ಸಾರಿದರು ದಾರ್ಶನಿಕರು.

ನಮ್ಮ ನಮ್ಮ ನಡುವೆ ಮುಖಾಮುಖಿಯಾದರೂ
ಅರಿಯಲಾರದೇ ಸ್ಪಂದಿಸದೇ ಹೋದವರೂ ನಮ್ಮವರೇ...
ಮನಸ್ಸಿಗೆ ಶಬ್ದಜಾಲಗಳ ಹೊಂದಿಸಿ
ದೇಹ ಧ್ವನಿಪೆಟ್ಟಿಗೆಯಲಿ ಮಾತು ಪೋಣಿಸಿದವರು
ಆತ್ಮಸಾಕ್ಷಿಯಂತೆ ನಡೆದು ನುಡಿವವರು
ತೀರಾ ವಿರಳವಾದರೂ ಇರುವರಲ್ಲ...
.
ಏನೆಲ್ಲ ತಾಂತ್ರಿಕತೆಯಲಿ ಪರಸ್ಪರ
ಸಂಪರ್ಕ ಕಲ್ಪಿಸಿ ವಿಶ್ವವನೆ ಕಿರಿದುಗೊಳಿಸಿದರೂ
ಒಳಗೊಳಗೇ ಪರಕೀಯರಾಗಿ ಉಳಿದವರು
ಜಗದ ಕಟುಸತ್ಯ ಮುಚ್ಚಿಟ್ಟು ನುಡಿಯುವವರು,
ಹಾಗೇ ಬರೆಯುವವರೂ ಹಾರಾ ತುರಾಯಿ ಹಾಕಿಸಿಕೊಂಡು
ಬಹುಪರಾಕ್ ಗಳಿಸುವಂಥ ಬಹುಮಂದಿ ಇರುವರು
ಅವರಿಗೇ ಹಾಡಿ ಹೊಗಳುವವರಿಗೆ ಕಾಲವಿದಲ್ಲ...

ಅಪ್ರಿಯವಾದರೂ ಸತ್ಯವನ್ನು ಪ್ರಿಯವಾಗಿ ಹೇಳುವವರಿಗೆ
ಇದು ಕಾಲವಲ್ಲವೆಂದು ಅವರನ್ನು ದೂರ ಇಡುವರಲ್ಲ;
ಪ್ರತಿಭೆ ಎಂಬುದು ಎಂದಿಗೂ ಬೂದಿ ಮುಚ್ಚಿದ ಕೆಂಡ
ಅದು ಎಂದಿದ್ದರೂ ಪ್ರಜ್ವಲಿಸುವುದೂ ಸಿಡಿಯುವುದೇ
ಅದ ಕೆದಕಬಾರದೆಂಬುದ ಹೊಳೆಯುವುದೇ ಇಲ್ಲ...!

ಗತಕಾಲದ ಚರ್ವಿತ ಚವರ್ಣ ಬೋಧನೆಗಳು
ದಿನೇದಿನೇ ವೇಗಗತಿಯ ವೈಜ್ಞಾನಿಕ ಪ್ರಗತಿಯಲಿ
ಸಾಗಿಹ ಪ್ರಪಂಚಕ್ಕೆ ಸಪ್ಪೆಯಾಗಿರೆ ರುಚಿಸುವುದೆಂತು...?
ಹೊಸ ಮೌಲ್ಯಗಳ ಹುಟ್ಟು ಹಾಕುವವರ ಪರಿಶ್ರಮಕ್ಕೆ,
ಎನಿತೋ ದೈವಿಕತೆಯಲಿ ಹೊಸ ತತ್ವಗಳ ವಿಚಾರಗಳಿಗೆ
ಇಂಬುಗೊಡುವವರಿಗೆ,  ಅದೇನೆಂದು ತಿಳಿಯಬಯಸದೇ
ಗುರುತಿಸಲಾರದೇ ಹೋದವರೇ ಆಭಿಮಾನಶೂನ್ಯರಲ್ಲವೇ....
ಈ ಪ್ರಪಂಚದಲಿ ನಮ್ಮನಮ್ಮವರೊಳಗೇ....

ಹೌದು, ಹೊಸತೆಂಬುದನ್ನು ಈ ಜಗತ್ತು
ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳಲಾರದಲ್ಲ..!
ಪ್ರಪಂಚದಲ್ಲಿ ಎಲ್ಲರೂ ತಮ್ಮ ಪ್ರಚಾರಕ್ಕಾಗಿ,
ಹಣ ಹೆಸರು ಮಾಡಲಿಕ್ಕಾಗಿಯೆ ಇದ್ದಾರೆಂಬ
ಭ್ರಮೆಯೇ ದೊಡ್ಡ ಪಿಡುಗಾಗಿ ಪೀಡಿಸಿದೆಯಲ್ಲ...

ಯಾರು ಗುರುತಿಸದಿದ್ದರೇನು! ಸುಮ್ಮನಿರಲಾರದ
ಕವಿ ಜೀವವೋ ತನ್ನ ತುತ್ತೂರಿ ತಾನೇ ಊದಿಕೊಳ್ಳುವುದು
ಅಭಿಮಾನ ಶೂನ್ಯರೆನಿಸಿಕೊಂಡವರ ನಡುವೆಯೇ
ಅನುಭವದ ತೇಜಿಯಲಿ ಬದುಕು ಬರಹದಲಿ ಬದುಕುವುದು;
ಓದ ಬಯಸಿದವರಿಗೆ ಪರಾಮರ್ಶಿಸಿ ಸಮಾಲೋಚಿಸುವುದು
ಆತ್ಮ ಸಂತೋಷವನೆ ಕಾಣುವುದು; ಬಿಟ್ಟರೂ ಬಿಡದೇ
ಆ ಅನುಭಾವಗಳನು ಬಿಚ್ಚಿಟ್ಟು ಬಣ್ಣಿಸುವುದೂ
ಅಭಿಶಾಪವೇ ಅನಿವಾರ್ಯ ಕರ್ಮವೇ ಆಗಿದೆಯಲ್ಲ....

Wednesday, August 03, 2011

ಕಾರ್ಗಿಲ್ ಕಲಿಯೇ ನೀನು!

ನಿರುತ ಜಾಗೃತನಾಗು ನಿರುತ ಜಾಗೃತನಾಗು
ಗಡಿ ಕಾಯ್ವ ಧೀರ, ಏಳು ಎದ್ದೇಳು ಭಾರತದ ವೀರ!

ಅಗೋ ಹಿಮಗಿರಿಯ ಮಂಜಿನಾ ಮಬ್ಬಿನಲಿ
ಕೊಬ್ಬಿರುವ ಪಾತಕಿಯ ವೈಚಿತ್ರ್ಯ ನೋಡು
ಆ ಅರಿಯ ತಲೆ ತರಿದು ತಾಂಡವವ ನೀನಾಡು
ಪ್ರಳಯ ರುದ್ರನ ವರ ಪುತ್ರ ನೀನು.

ನಿನಗೆಂದೂ ಇದೆ ನೋಡು ಅರ್ಜುನಗೆ
ಅನುಜನಾದವನ ಸತತ ಪ್ರೀತಿ
ಆ ದೇವನ ಶಾಂತಿ ಸಂಧಾನ ರೀತಿ
ಏಳು ಎದ್ದೇಳು ರಣ ಕಹಳೆ ಊದು.

ನಿನೆಂದೂ ಸ್ಮರಿಸುತಿರು ಚಕ್ರ ಹಿಡಿಯದೇ
ಯೋಧನಿಗೆ ತಾನಾದ ಪ್ರೇರಣೆಯ ಶಕ್ತಿ
ಧರ್ಮ ಸಂಸ್ಥಾಪನೆಗೆ ಸಾರಥಿ ಅವನ ನೀತಿ
ಏಳು, ಎದ್ದೇಳು ಪರಮಾತ್ಮನಾ ಆಪ್ತ ನೀನು.

ನಿರುತ ಜಾಗೃತನಾಗು
ನಿರುತ ಜಾಗೃತನಾಗು
ಕಾರ್ಗಿಲ್ ಕಲಿಯೇ ನಿನು
ಜಗ್ಗದಿರು ಕುಗ್ಗದಿರು; ನಡೆ ಮುಂದೆ ನೀನು!.

(ಕಾರ್ಗಿಲ್ ಯುದ್ದ ನಡೆದ ಆ ದಿನಗಳಲ್ಲಿ ನಾನು ಬರೆದ ಕವನ
-15-08-1999.  ಉತ್ಥಾನ ಪತ್ರಿಕೆಯಲ್ಲಿ ಪ್ರಕಟಿತ)

ಕಾರ್ಗಿಲ್ ಯುದ್ಧ ನಡೆದು  ವರ್ಷಗಳು ಕಳೆದುಹೋದವು. ಪ್ರತಿವರ್ಷ ಜುಲೈ 26 ರಂದು ಕಾರ್ಗಿಲ್ ನಲ್ಲಿ ವಿಜಯ ಪತಾಕೆ ಹಾರಿಸಿದ ದಿನವನ್ನು ಆಚರಿಸುತ್ತೇವೆ. ವಿಕ್ರಮ್ ಬಾತ್ರಾ, ಅನೂಜ್ ನಯ್ಯರ್,
 ಸೌರಬ್ ಕಾಲಿಯಾ ರಂತಹ 527 ವೀರ ಯೋಧರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ದೇಶ ಕಾಯುತ್ತಿರುವ ಇಂತಹ  ಸೈನಿಕರಿಂದಾಗಿಯೇ ನಾವು ಬೆಚ್ಚನೆಯ ಬದುಕು ಸಾಗಿಸುತ್ತಿದ್ದೇವೆ. ನೆಮ್ಮದಿಯ ನಿದ್ರೆಗೆ ಜಾರುತ್ತಿದ್ದೇವೆ.  ಕಾರ್ಗಿಲ್ ದಿನವಾದ ಜುಲೈ 26-07-11 ರಂದು ಕನ್ನಡ ಪ್ರಭ ದಿನ ಪತ್ರಿಕೆ ಯಾರೂ ಮರೆಯಲಾಗದಂತ ಚಿರಸ್ಮರಣೀಯ ಲೇಖನವನ್ನು ಪ್ರಕಟಿಸಿ- ಕಾರ್ಗಿಲ್ ಯುದ್ದದಲ್ಲಿ ಮಡಿದ ಸೈನಿಕರಿಗೆ ನಮ್ಮ ಶ್ರದ್ಧಾಂಜಲಿ ಅರ್ಪಿಸಿದೆ. ಪತ್ರಿಕೆಯ ಬಳಗಕ್ಕೆ ಧನ್ಯವಾದಗಳು.

Wednesday, March 31, 2010

ನಾ ಕವಿ ಎಂದು ಬರೆದ ಕವನವಿದಲ್ಲ....




ನಾ ಕವಿ ಎಂದು ಬರೆದಾ ಕವನವಿದಲ್ಲ
ಓ ನನ್ನ ಕಾವ್ಯಕನ್ನಿಕೆ ನೀನೇ ಒಲಿದಂಥ ಕವನ
ಈ ನನ್ನ ಸುಂದರ  ಕವನ.      ||ಪ||

ಯೌವನ ಕಾಂತಿ ಮಿಂಚಿದ ಕವನ
ಪ್ರೇಮ ವಸಂತ ಹರಸಿದ ಕವನ
ಪ್ರೀತಿ ಸಂಗೀತ ಹಾಡಿದ ಕವನ
ಈ ನನ್ನ ಶೃಂಗಾರ ಕವನ        ||೧||

ಹೃದಯ ಸ್ಪೂರ್ತಿ ಸೆಳೆದ ಕವನ
ವಾತ್ಸಲ್ಯ ವೀಣೆ ನುಡಿಸಿದ ಕವನ
ಮಮತೆಯ ಮಡಿಲಲಿ ಬೆಳೆದ ಕವನ
ಈ ನನ್ನ ಕರುಣಾರಸ ಕವನ   ||೨||

ಜಗದ ಚಿಂತನೆ ಕಲಕಿದ ಕವನ
ಜನಾರಣ್ಯದ ಭಯ ನೀಗಿದ ಕವನ
ಬದುಕಿನ ಪ್ರೀತಿಯೆ ಹೊಮ್ಮಿದ ಕವನ
ಈ ನನ್ನ ಧೀಮಂತ ಕವನ   ||೩||

ಜೀವನ ಚೇತನ ಚಿಮ್ಮಿದ ಕವನ
ನೂತನ ಭಾವ ನೀಡಿದ  ಕವನ
ಆತ್ಮನಿವೇದನೆ ಮಾಡಿದ ಕವನ
ಬ್ರಹ್ಮಾನಂದವೆ ಈ  ನನ್ನ ಕವನ ||೪||

Tuesday, July 24, 2007

ಕೆಲವು ಹನಿಗವನಗಳು

1.ಹಾಡುವುದನು
ಹಾಡುವುದನು
ಬಿಡಬೇಕೆಂದರೂ .
ಬಿಡಲಿಲ್ಲ ಹೃದಯ
ಹಾಡಿದರೆ ತಾನೆ
ನಲಿದೀತು ತೆರೆಸೀತು
ಜಗದ ಹೃದಯ.

2.ಮಾತು-ಮೌನ
ನನ್ನವಳ ಮಾತು
ಪಟಾಕಿ ಸಿಡಿದಂತೆ
ನನ್ನ ನಿತ್ಯ ಮೌನ
ನೀರು ಸುರಿದಂತೆ.

3.ನನ್ನವಳು
ಮುದ್ದು ಮಾಡುವಾಗ
ನನ್ನವಳು ಮದ್ದಾಗುತ್ತಾಳೆ
ಅವಳೊಂದಿಗೆ ವಾದಕ್ಕಿಳಿದಾಗ
ಅವಳೇ ಸಿಡಿ ಮದ್ದಾಗುತ್ತಾಳೆ ನನ್ನೆದೆಗೆ.

4.ಮೋಡಿ
ಚುಟುಕಾಗಿ ಹೇಳಿದರೆ
ಕೇಳುವವರೆ ಎಲ್ಲ –ಆದರೆ,
ಚುಟುಕು ಕಲೆಯ ಮೋಡಿ
ತಟ್ಟನೆ ಹೊಳೆಯುವುದಿಲ್ಲ
ಹೊಳೆದರಾಗಬೇಕು ನೋಡಿ
ಚುರುಕು ಮುಟ್ಟಿಸಿದಂತೇ body.

ಜೀವ-ಭಾವ

ಓ ನನ್ನ ಜೀವವೆ
ಏಕೆ ಸುಮ್ಮನೆ ಕೊರಗುವೆ
ಕಾಯುವುದು ನಿನ್ನ ಭಾವವೆ
ನಿನ್ನೊಳಗಿನ ಸತ್ವವೇ.

ಓ ನನ್ನ ಭಾವವೆ
ಏಕೆ ಬೇಧವ ಎಣಿಸುವೆ
ದಿಗ್ ದಿಗಂತದಾಚೆ ನಿನ್ನ ತಾಣವೆ
ಅಗೋಚರ ನಿನ್ನ ಲೋಕವೆ
ಚರಾಚರಗಳಲಿ ನಿನ್ನ ಪ್ರೇಮವೇ.

ಅನೂಹ್ಯ ಸೃಷ್ಟಿ ನೀನೆ ಅನಿತ್ಯ ದೃಷ್ಟಿ ಕಾಣುವೆ
ಆ ಭೋಗ ನೋವ ನಲಿವನೆಲ್ಲ ಇಲ್ಲೆ
ಅನುಭವಿಸುವೆ;ಬಿಡದೆ ಜಯಿಸುವೇ.

ನಿನಗೆ ನೀನ ದೈವವೆ
ಎದೆಯ ಗುಡಿಗೆ ದಿವ್ಯವೇ
ಎಲ್ಲ ಪೂಜೆ-ಭಕ್ತಿಗೆ-
ನೀನೆ ಧನ್ಯ ಜೀವಿಯೇ.

ಆದಿ ಅಂತ್ಯವಿಲ್ಲದೆ ಪೂರ್ಣವಾಗಿಹೆ
ನೀ ಅನಂತ ರೂಪವೇ
ನಿನ್ನೊಳಗೆ ನೀನು ಸತ್ಯವೇ;
ಅಪಕರ್ಮವಳಿವ ತತ್ವವೇ.

Tuesday, July 10, 2007

ಅದೇ ಸೂರ್ಯ; ಅದೇ ಬೆಳಗು!

ಮನವು ಕುಸಿದು ದೇಹ ಮುದುಡಿ
ಜೀವಕೆ ಲವಲವಿಕೆಯೆ ಇಲ್ಲವು
ಮಾತು ಮರೆತು ಮೌನ ಮುಸುಕಿ
ಪ್ರೀತಿ ಸ್ನೇಹಗಳೆಲ್ಲೋ ಹೂತು ಹೋದವು.

ಅದೇ ರಗಳೆ ಅದೇ ದೊಂಬಿ ಗಲಭೆಯು
ಉಗ್ರರಿಂದ ಮುಗ್ಧ ಜನರ ಹತ್ಯೆಯು
ಏಕೋ ಭೀತಿ ಅದೇಕೆ ವಾದ ಹೇಳಿ ಕೇಳಿ
ಪ್ರತ್ಯೇಕತೆ ದುರಭಿಮಾನ ಪ್ರತಿಷ್ಠೆಯು.

ಅಯ್ಯೊ ಬಂತೆ ಇದೆಂಥ ಕೆಟ್ಟ ಕಾಲ
ಒಂದುಗೂಡಿ ಬದುಕಲೇಕೆ ಕಷ್ಟವು
ಏನೆಲ್ಲ ನೀತಿ ನಿಯಮ ಕಟ್ಟಳೆಗಳೂ
ಮುರಿದು ಬೀಳೆ ಭರಿಸಲಾಗದೀ ನಷ್ಟವು.

ಪಶು-ಪಕ್ಷಿಗಳಿಗೂ ಒಳಸಮೀಕ್ಷೆ ಶಕ್ತಿಯು-
"ಇದೇ ಏನು ಮನುಜಕುಲ;ಇದೇನಿವರ ಆಟವು
ದಿನಬೆಳಗಾದರೆ ಇವರಲ್ಲೇಕೆ ಗೊಣಗಾಟವು",
ಇದೋ ನೋಡಿ ಪೇಟೆ ಬೀದಿಲಿ
ಜನಸಂದಣೆ ವಾಹನಗಳ ಮಧ್ಯೆಯು
ಹಸುವೊಂದು ಸ್ವಸ್ಥವಾಗಿಯೆ ಮಲಗಿದೆ
ತನ್ನದೇ ಸ್ವಾತಂತ್ರ್ಯವನು ಬಯಸಿದೆ
"ಈ ಮನುಜನಿಗೇಕೆ ತಲೆ ಕೆಟ್ಟಿದೆ"
ಎಂದು ತಾನೆ ಮೆಲ್ಲಗೆ ಮೆಲುಕು ಹಾಕಿ ಮೈಚಲ್ಲಿದೆ.

ಇದೇನು ಹೃದಯ ಇದೇನೊ ಭಾವ
ಇದ್ದಕ್ಕಿದ್ದೊಲೆ ಅನುರಣಿಸುವ ಬಂಧವು
ಅದೇ ಸೂರ್ಯ ಅದೇ ಬೆಳಗು!
ಮತ್ತದೇ ಹೊಂಬಿಸಿಲಿಗೆ ನಾಂದಿಯು!!.
-ಎಚ್.ಶಿವರಾಂ

Tuesday, July 03, 2007

ಕಾಂಬೆವು ದೇವರು

ದಿನವೂ ಬೆಳಕಿನತ್ತ
ಮುಖ ಮಾಡಿ
ಏಳುವವರು ನಾವು
ಇರುಳು ಸ್ವಸ್ಥರಾಗಿ
ನಿದ್ರಿಸಲು ಇಚ್ಛಿಸುವವರುನಾವು.

ಎಷ್ಟೋ ಸಲ ಇನ್ನೊಬ್ಬರ ಕಷ್ಟಕ್ಕೆ
”ಅಷ್ಟೇ ಎನ್ನುವವರು
ಅಷ್ಟೇ ಬಾರಿ ನಮ್ಮದೇ ಕಷ್ಟಕ್ಕೆ
”ಅಬ್ಬಾ ಎಂದುಸುರುವವರು
ನಿಡುಸುಯ್ಯುವವರು ನಾವು.

ದಿನವೂ ಭವಿಷ್ಯದತ್ತ
ನಿಟ್ಟಿಸಿ ಸುಖದ ಚಿಂತೆ ಮಾಡುವವರು
ಕ್ಷಣವೂ ವರ್ತಮಾನದಲಿ
ಯಾವ ನೋವೂ ಇರಲೊಲ್ಲದವರು.

ದಿನವೂ ಏನೇ ಆಗಲಿ-ಬಿಡಲಿ
ಹೊರಗಿನ ಗೋಳಿಗೆ
”ಅನಿಷ್ಟ” ಎನ್ನುವವರು
ಮನೆಯೊಳಗಿನ ದುಃಖಕೆ
”ಅಯ್ಯೋ” ಎಂದೊರಲುವವರು.

ದಿನವೂ ಆಸೆಗಳ ಹೊತ್ತು
ಹೊಸ ಬದುಕನರಸುತ್ತಲೆ
ಉತ್ಸುಕರಾಗುವೆವು;
ಸೋತಾಗಲೂ ನಗ ಬಲ್ಲವರು!
ಅರಿತಾಗಲೆ ನಾವು ಮನುಜರು
ಬೆರೆತು ಒಂದಾದಾಗಲೇ
ನಾವು ಕಾಂಬೆವು ದೇವರು.
-ಎಚ್.ಶಿವರಾಂ
ಮಂಗಳ ವಾರ ಪತ್ರಿಕೆ ಯಲ್ಲಿ ಪ್ರಕಟಿತ- ೦೨-೦೯-೧೯೯೨

Friday, June 15, 2007

ನಾಶ ಎಂದಿಗೂ ಇಲ್ಲ

ನಾಶ ಎಂದಿಗೂ ಇಲ್ಲ!

ಕಾಲ ನಿಲ್ಲಬೇಕು;ಕಾಲನ ಕರೆ ಬರಬೇಕು
ಎಲ್ಲರೂ “ಓ”ಗೊಡಬೇಕು
ಥರ ಥರ ನಡುಗಬೇಕು;ನಿರ್ಲಿಪ್ತರು ಮುಗಳ್ನಗಬೇಕು
ನಗರಗಳು ಒಡೆದು ಛಿದ್ರವಾಗಬೇಕು
ಕಾಡೆಲ್ಲ ನಾಡನ್ನು ದಿಃಕ್ಕರಿಸಿ ನಗಬೇಕು.

ತಿರುಗುವ ಭೂಮಿ ನಿಲ್ಲಬೇಕು
ಉರಿವ ಸೂರ್ಯ ಮತ್ತೂ ಉರಿಯಬೇಕು
ಅಂಟಾರ್ಕ್ಟಿಕಾದ ಮಂಜುಗಡ್ಡೆಗಳು ಸಿಡಿಯಬೇಕು
ವ್ಯೂಮ ಭೂಮಿಗಳು ಒಂದಾಗಬೇಕು
ಹರಿವ ನದಿಗಳು ಮನುಷ್ಯರಿಗಿಂತಲೂ
ಮಿಗಿಲಾಗಿ ಕೊತಕೊತ ಕುದಿಯಬೇಕು.

ಅರೆ-ಬರೆ ಉಳಿದ ಅಂತರಂಗದ ಧ್ವನಿಗಳೆಲ್ಲ
ಹೊಸ ಅರ್ಥ ಹುಡುಕಬೇಕು
ಜೀವ ಸಂಕುಲ ಸಾವಿನಲ್ಲೆ ಮರುಹುಟ್ಟು
ಕಾಣಲು ಹಾತೊರೆಯಬೇಕು.

ಇಲ್ಲ ಹಾಗಾಗುವುದಿಲ್ಲ ಸಂಪೂರ್ಣ ನಾಶ ಎಂದಿಗೂ ಇಲ್ಲ
“ನನಗೆ ಸಾವು ಬರುವುದಿಲ್ಲ”ಎಂಬ ಕೆಟ್ಟ ಧೈರ್ಯ
ಪ್ರಪಂಚ ಹೀಗೇ ಮುಂದುವರೆಯುತ್ತದೆ
ಏನೇನೋ ವೈಜ್ಞಾನಿಕ ಪ್ರಗತಿ ಕಾಣುತ್ತದೆ
ಮಾನವೀಯತೆ ಮಾತ್ರ ಸಾಯುತ್ತಲೆ ಬದುಕುತ್ತಿರುತ್ತದೆ.

ಸಮುದ್ರ ಹೀಗೇ ಮತ್ತೆ ಗಂಭೀರ ಮೊರೆಯುತ್ತಿರುತ್ತದೆ
ಕೆಲವೊಮ್ಮೆ ಮರಳಿ ಅಬ್ಬರಿಸುತ್ತದೆ;ಅಷ್ಟೇ.

*ಕರ್ಮವೀರ ದಲ್ಲಿ ಪ್ರಕಟಿತ

Sunday, September 10, 2006

ಒಲವಿಲ್ಲದ ಸತ್ಯವು

ನಾನು ಜೀವಿ ನೀನು ಭುವಿ
ನಮ್ಮ ಮೇಲೇ ಆಕಾಶವು
ಗಾಳಿ ಬೆಳಕು ಹಕ್ಕಿಗಳ ಚಿಲಿಪಿಲಿ
ಎತ್ತೆತ್ತಲೂ ವಿಪುಲ ಅವಕಾಶವು.

ನಾನು ಮನುಜ ನೀನು ಕಣಜ
ಉಳ್ಳವರದೇ ಇಲ್ಲಿ ಆಧಿಪತ್ಯವು
ಮಳೆಬೆಳೆ ದವಸ ಧಾನ್ಯ ನಮ್ಮದೆ ನಿಜ
ಕಲಿತರೆಲ್ಲ ಬದುಕಿನ ಪಾರುಪತ್ಯವು.

ನಾನು ಕವಿ ನೀನು ಛವಿ
ನಮಗೆ ಎದುರೇನು ಈ ಲೋಕವು
ಸಾವು ನೋವು ಬಹಳ ಕಹಿ
ಎಂದಿಗೂ ತಿಳಿವಿನ ಹರವಿದ್ದರೆ ಚೆನ್ನವು.

ನಾನು ಜ್ಞಾನಿ ನೀನು ದಿವ್ಯ ಮೌನಿ
ಏಕೆ ನಮ್ಮೊಳಗೇ ಆಂತರ್ಯುದ್ಧವು
ಭಾವದಲೆ ಬೆರಗು ಬೆಲೆ ಆತ್ಮ ಗ್ಲಾನಿ
ಎಲ್ಲ ಇಲ್ಲೇ ಒಲವಿಲ್ಲದ ಸತ್ಯವು.

ನನ್ನ “ಮಾರ್ದನಿ” ಕವನ ಸಂಕಲನದಿಂದ